Friday, 20 April 2012

ಮೂರು ಜನ ಊರಿಗೋದ್ರಂತೆ.
ಯಣ್ಣ, ಒಂದ್ ಕತೆ ಏಳ್ತಿನಿ, ಕೇಳಿಸ್ಕಬೇಕು.
ಅದೇನೇಳಣ್ಣ, ನೀನಿರದೇ ಏಳಕೆ, ನಾನಿರದೇ ಕೇಳಕೆ.
ಮೂರು ಜನ ಒಂದ್ ಬರ ಬಂದಿರ ಊರಿಗೆ ಓದ್ರಂತೆ. ಜನ ಯಲ್ಲ ಸೇರ್ಕಂಡ್ರಂತೆ. ವಬ್ಬ ಹದ್ನಾರು ಹಲ್ನೂ ಬುಟ್ಕಂಡು ನಗಾಡಿಕಂಡು ಮಾತಾಡಕೆ ಸುರು ಮಾಡಿದ್ನಂತೆ. ಅದ ನೋಡಿ ಜನಕ್ಕೆ ತುಂಬಾ ಕೋಪ ಬಂತಂತೆ. ನಾವಿಲ್ಲಿ ನೋಡಿದ್ರೆ ನೀರು, ನ್ಯರಳಿಲ್ಲ ಏನಪ್ಪ ಮಾಡದು, ಇವ್ನು ಏನಾರ ಮಾಡ್ತನೆ ಅಂತ ನೋಡಿದ್ರೆ ನಗಾಡ್ತಾ ಅವ್ನೆ ಅಂದ್ ಬುಟ್ಟು ಮುಚ್ಚಯ್ಯ ಬಾಯ ಅಂದ್ರಂತೆ. ಇವ್ನು ಅದ್ಕೂ ನಗ್ತಾ ಇದ್ನಂತೆ. ಇವ್ನು ಯಾಕೋ ಸುಮ್ಕಾಗದಿಲ್ಲ ಅಂದ್ ಬುಟ್ಟು ಅಳ್ಳಿಮರದ ಅಂಟ ತಂದು ಬಾಯಿಗಾಕಿದ್ರಂತೆ. ಆಗ ಸುಮ್ನಾದ್ನಂತೆ.
ಇನ್ವಬ್ಬ ಗರಂ ಅಂದ್ಕಂಡು ಮಾತಾಡಕೆ ಸುರು ಮಾಡಿದ್ನಂತೆ. ಮಕ ಅಂಗೆಯ ಉರೀತಿತ್ತಂತೆ. ನಾನು ಎಷ್ಟೊಂದು ಅಬಿವೃದ್ದಿ ಕಾಯ್ರಕ್ರಮಗಳ ಮಾಡಿದ್ದಿನಿ. ಆದ್ರೂ ಅವ್ನು ಯಾವೊನೊ ನನ್ನ ಕುಚ್ರಿಯಿಂದ ಕ್ಯಳಿಗೆ ಬೀಳಿಸ್ಬುಟ್ಟ. ನೀವ್ಯಲ್ಲ ಸೇರಿ ನನ್ನ ಕುಚ್ರಿ ಮ್ಯಾಲೆ ತಿಗ್ರ ಕುಂಡ್ರಿಸಿದ್ರೆ ತಿಗ್ರ ನಾನು ಅಬಿವೃದ್ದಿ ಕ್ಯಲ್ಸವ ಮುಂದುವರುಸ್ತಿನಿ. ಒಂದೊಂದ್ ಊರಿಗೆ ಇಷ್್ಟ ಕೋಟಿ ಅಂತ ಸಕ್ರಾರ ಕೊಡ್ಬೇಕು. ಇವ್ನು ಕೊಡ್ದೇ ಇದ್ರೆ ಇಳ್ಸಿ ನನ್ನ ಕುಂಡ್ರಿಸಿ. ನಾನು ಕೊಡ್ತಿನಿ,  ನನ್ ಗಾಚಾರ್ವೇ ಸರಿ ಇಲ್ಲ. ಎಲ್ಲಿಗೋದ್ರೂ ನಂಗೆ ಈ ವಚನ ಬ್ರಷ್ಟರೇ ಸಿಗ್ತಾರೆ. ಆಡಿದ್ ಮಾತ ಉಳಿಸ್ಕಳದೇ ಇಲ್ಲ. ಅದೇನೇ ಆಗ್ಲಿ, ನಾನಂತು ಕುಚ್ರಿ ಸಿಗತಕ ಸುಮ್ಕಿರ ಮಗ್ನೇ ಅಲ್ಲ. ಏನಂತಿರಿ ಅಂದ್ನಂತೆ. ಆಗ ಜನ ನಾವ್ ಬರ ಬಂದು ನರಳ್ತಾ ಇದ್ದಿವಿ. ಇವ್ನಿಗೊಂತರ ದೆವ್ವ ಇಡ್ದದೆ. ಇವ್ನಿಂದ ನಮಿಗೇನೂ ಅನ್ಕೂಲ ಇಲ್ಲ ಅಂದುಕೊಂಡ ವಬ್ಬ, ಸಾ ಅಲ್ಲಿ ವಬ್ ಸ್ವಾಮಿ ಅವ್ರೆ. ಅವ್ರ ಕೂದ್ಲು ಎಷ್ಟವೆ ಅಂತವ ಸರಿಯಾಗಿ ಎಣಿಸಿದ್ರೆ ನೀವು ತಿಗ್ರ ಮುಖ್ಯ ಮಂತ್ರಿ ಆಗ್ತಿರಂತೆ ಎಂದ. ಕೂಡ್ಲೇ ಆಸಾಮಿ ನಾಪತ್ತೆಯಾದ.
ಮೂರನೇ ವ್ಯಕ್ತಿ ಮಾತಾಡಕೆ ಸುರು ಮಾಡಿದ. ನೋಡಿ ಬಂದುಗಳೆ, ನಾನು ಯಾವ ಸನ್ನಿವೇಶದಲ್ಲಿ ನಿಮ್ಮ ಊರಿಗೆ ಬಂದಿದ್ದೇನೆ, ಯಾವ ಶಕ್ತಿ ನನ್ನನ್ನು ನಿಮ್ಮ ಊರಿಗೆ ಕಳಿಸಿಕೊಟ್ಟಿದೆ, ನೀವು ಎಂತಹ ಸಂಕಷ್ಟಗಳ ಸನ್ನಿವೇಶದಲ್ಲಿ ಬದುಕನ್ನು ಸಾಗಿಸುತ್ತಿದ್ದೀರಿ, ಈ ನೋವಿನಿಂದ ನಿಮ್ಮನ್ನು ಬಿಡುಗಡೆ ಮಾಡಲು ಯಾವ ರೀತಿಯ ಸಂವೇದನಾಶೀಲತೆಯುಳ್ಳ ನಾಯಕನು ಬೇಕಾಗುತ್ತದೆ ಎಂಬುದನ್ನು ನಿಮ್ಮ ಆತ್ಮಸಾಕ್ಷಿಗೆ ಬಿಡುತ್ತೇನೆ, ಏನು ಒಂದು ನಾನು ನಿಮ್ಮ ಊರಿಗೆ ಬಂದಿದ್ದೇನೆ, ಈ ಒಂದು ಕ್ಷಣವನ್ನ ನಾನು ನನ್ನ ಜೀವಮಾನದಲ್ಲೇ ಮರೆಯಲು ಸಾಧ್ಯವಿಲ್ಲ ಎಂದು ಗಳಗಳನೆ ಅತ್ನಂತೆ. ಅಲ್ಲಿದ್ದ ಜನಗಳೂ ತಮ್ಮ ನೋವನ್ನು ಮರೆತು ಈತನೊಂದಿಗೆ ಸೇರಿ ಅತ್ತರಂತೆ. ಒಂದ್ ಅಜ್ಜಿ ಒಂದ್ ಚಂಬು ಮಜ್ಜಿಗೆ ತಂದು ಇದ್ನಾರ ಕುಡ್ದು ನಿನ್ನ ದುಃಖ ಕಡಿಮೆ ಮಾಡಿಕಳಪ್ಪ ಅಂದರಂತೆ.
ಈಗ ನನ್ ಕತೆ ಮುಗೀತು. ಈಗೇಳು, ಇವರು ಮೂರು ಜನರ ಯಾರು ಅಂತವ? 
ಯಣ್ಣ ನನ್ನ ಕೈಲಿ ಇದ್ಕೆ ಉತ್ರ ಏಳಕೆ ಆಗ್ತಾ ಇಲ್ಲ. ನಾನು ಅಷ್ಟೊಂದ ಓದಿಲ್ಲ. ಇದ ನಮ್ ಕನ್ರಾಟಕದ್ ಜನಕ್ಕೆ ಬುಡ್ತಿನಿ,  ಸದ್ದಿಕೆ ತಲೆ ಸಿಡಿತಾ ಅದೆ, ಬಾ ಸ್ವಲ್ಪ ಕಾಪಿ ಕೊಡ್ಸು.
- ಈ.ಬಸವರಾಜು




No comments:

Post a Comment